ನಾವು ಭಿಕ್ಷೆ ಬೇಡುವಂತಹ ಪರಿಸ್ಥಿತಿಗೆ ಬಂದಿದ್ದೇವೆ: ವಿನೋದ್ ಪ್ರಭಾಕರ್

ವಿನೋದ್ ಪ್ರಭಾಕರ್ ಅಭಿನಯದ ‘ಮಾದೇವ’ ಚಿತ್ರ ಕಳೆದ ವಾರ ಬಿಡುಗಡೆಯಾಗಿತ್ತು. ಚಿತ್ರದ ಬಗ್ಗೆ ಮೆಚ್ಚುಗೆ ಕೇಳಿಬಂದಿದೆ. ಆದರೆ, ಕಲೆಕ್ಷನ್ ಇಲ್ಲ ಎಂಬ ಕಾರಣಕ್ಕೆ ಹಲವು ಮಲ್ಟಿಪ್ಲೆಕ್ಸ್ಗಳಿಂದ ಚಿತ್ರವನ್ನು ಎತ್ತಂಗಡಿ ಮಾಡಲಾಗಿದೆ. ಕೆಲವು ಮಲ್ಟಿಪ್ಲೆಕ್ಸ್ಗಳಲ್ಲಿ ಚಿತ್ರವಿದ್ದರೂ, ಸರಿಯಾದ ಪ್ರದರ್ಶನ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿನೋದ್ ಪ್ರಭಾಕರ್ ಮತ್ತು ಚಿತ್ರತಂಡದವರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಹೋಗಿ ದೂರು ಸಲ್ಲಿಸಿದ್ದಾರೆ.
ನಂತರ ಮಾತನಾಡಿರುವ ವಿನೋದ್ ಪ್ರಭಾಕರ್, ‘ಒಂದಿಷ್ಟು ಮಲ್ಟಿಪ್ಲೆಕ್ಸ್ಗಳಲ್ಲಿ ಕಳೆದ ವಾರ ಎರಡು ಪ್ರದರ್ಶನ ಕೊಡಲಾಗಿತ್ತು. ಪ್ರದರ್ಶನಗಳ ಸಂಖ್ಯೆ ಕಡಿಮೆ ಇದ್ದರೂ ಒಳ್ಳೆಯ ಕಲೆಕ್ಷನ್ ಇದೆ. ಯಾವುದೋ ಹಿಂದಿ ಸಿನಿಮಾಗೆ ಎರಡನೇ ವಾರದಲ್ಲಿ ಏಳು ಪ್ರದರ್ಶನ ಕೊಟ್ಟಿದ್ದಾರೆ. ಅಲ್ಲಿ ಜನರೂ ಇಲ್ಲ, ಕಲೆಕ್ಷನ್ ಸಹ ಇಲ್ಲ. ನಮ್ಮ ಚಿತ್ರಕ್ಕೆ ಜನ ಬರುತ್ತಿದ್ದಾರೆ. ಹಾಗಾಗಿ, ಇನ್ನೊಂದು ಪ್ರದರ್ಶನ ಕೊಡಿ, ಪ್ರೈಮ್ಟೈಮ್ನಲ್ಲಿ ಕೊಡಿ ಎಂದು ಕೇಳುತ್ತಿದ್ದೇವೆ. ಶನಿವಾರ, ಭಾನುವಾರ ನೋಡ್ತೀವಿ ಎಂದು ಬಹಳಷ್ಟು ಜನ ಹೇಳಿದ್ದಾರೆ. ಆದರೆ, ಎಲ್ಲಾ ಪಿವಿಆರ್ ಮಾಲ್ಗಳಲ್ಲಿ ಕೇವಲ ಒಂದು ಪ್ರದರ್ಶನ ಕೊಟ್ಟಿದ್ದಾರೆ. ಅದರಲ್ಲೂ ಪ್ರೈಮ್ ಟೈಮ್ ಕೊಟ್ಟಿಲ್ಲ. ಯಾವುದೇ ಮಾಲ್ನಲ್ಲೂ 20 ಪರ್ಸೆಂಟ್ಗಿಂತ ಕಡಿಮೆ ಜನ ಇಲ್ಲ. ಆದರೆ, ಹಿಂದಿಗೆ ಕೊಡುವ ಪ್ರಾಮುಖ್ಯತೆ ನಮಗೆ ಕೊಡುತ್ತಿಲ್ಲ’ ಎಂದು ಬೇಸರ ಹೇಳಿಕೊಂಡಿದ್ದಾರೆ.
ಇದು ಬರೀ ನನ್ನೊಬ್ಬನ ಸಮಸ್ಯೆ ಅಲ್ಲ ಎಂದಿರುವ ಅವರು, ‘ಎಷ್ಟೋ ವರ್ಷಗಳಿಂದ ಈ ಸಮಸ್ಯೆ ಇದೆ ಮತ್ತು ಬಹಳಷ್ಟು ಹೀರೋಗಳು ಈ ಬಗ್ಗೆ ದೂರು ಕೊಟ್ಟಿದ್ದಾರೆ. 23 ವರ್ಷ ಬಹಳ ಕಷ್ಟಪಟ್ಟಿದ್ದೇನೆ. ಇವತ್ತು ನನಗೆ ಒಂದು ಯಶಸ್ಸು ಸಿಕ್ಕಿದೆ. ಜನ ಸಹ ಒಪ್ಪಿಕೊಂಡಿದ್ದಾರೆ. ಹೀಗಿರುವಾಗ, ನಮಗೆ ಸಮಸ್ಯೆ ಆಗುತ್ತಿದೆ. ಈ ವಿಷಯವಾಗಿ ಯಾರನ್ನು ಕೇಳಬೇಕೋ ಗೊತ್ತಿಲ್ಲ. ನಾನು ಹೊಸಬ ಅಲ್ಲ. ನನ್ನ ತಂದೆ ಅಭಿಮಾನಿಗಳು ಸಹ ಬಂದು ಚಿತ್ರ ನೋಡುತ್ತಿದ್ದಾರೆ. ಮನೆಮಂದಿಯೆಲ್ಲಾ ಚಿತ್ರ ನೋಡುವುದಕ್ಕೆ ಬರುತ್ತಿದ್ದಾರೆ. ಆದರೆ, ಪ್ರದರ್ಶನಗಳು ಇಲ್ಲ. ಯಾರಿಗೋ ಬಂದು ಭಿಕ್ಷೆ ಬೇಡುವಂತಹ ಪರಿಸ್ಥಿತಿಗೆ ಬಂದಿದ್ದೇವೆ. ಬರೀ ನಮ್ಮ ಸಿನಿಮಾಗಷ್ಟೇ ಅಲ್ಲ, ಎಲ್ಲಾ ಕನ್ನಡ ಸಿನಿಮಾಗಳಿಗೆ ಪ್ರಾಮುಖ್ಯತೆ ಸಿಗಬೇಕು. ಮೊದಲು ಕನ್ನಡಕ್ಕೆ ಆದ್ಯತೆ ಕೊಡಬೇಕು. ನಂತರ ಬೇರೆ ಭಾಷೆಗಳಿಗೆ ಏನಾದರೂ ಮಾಡಿಕೊಳ್ಳಲಿ’ ಎಂದರು.
ಪ್ರದರ್ಶನವಷ್ಟೇ ಅಲ್ಲ, ಮಲ್ಟಿಪ್ಲೆಕ್ಷ್ಗಳಲ್ಲಿ ಕನ್ನಡ ಚಿತ್ರಗಳಿಗೆ ಪ್ರಚಾರಕ್ಕೂ ಅವಶ್ಯಕತೆ ಸಿಗುತ್ತಿಲ್ಲ ಎಂದಿರುವ ವಿನೋದ್ ಪ್ರಭಾಕರ್, ‘ಬರೀ ಪ್ರದರ್ಶನವಲ್ಲ, ನಮ್ಮ ಚಿತ್ರದ ಪ್ರಚಾರವಾಗುತ್ತಿಲ್ಲ. ಮಲ್ಟಿಪ್ಲೆಕ್ಸ್ಗಳಲ್ಲಿ ಸ್ಟ್ಯಾಂಡೀಸ್ಗಳನ್ನು ಇಡುತ್ತಿಲ್ಲ. ಮೈಸೂರಿನಲ್ಲಿ ಹಿಂದಿ, ಇಂಗ್ಲೀಷ್ ಚಿತ್ರಗಳ ಚಿತ್ರದ ಪ್ರಚಾರ ಮಾಡುತ್ತಿದ್ದರು. ನಮ್ಮ ಚಿತ್ರ ಎಲ್ಲೂ ಕಾಣುತ್ತಿಲ್ಲ. ಕನ್ನಡ ಚಿತ್ರಗಳನ್ನು ಯಾಕೆ ಕಡೆಗಣಿಸುತ್ತಿದ್ದಾರೆ ಗೊತ್ತಿಲ್ಲ’ ಎಂದು ಹೇಳುತ್ತಿದ್ದಾರೆ.
ರಾಧಾಕೃಷ್ಣ ಪಿಕ್ಚರ್ಸ್ ಲಾಂಛನದಲ್ಲಿ ಆರ್ ಕೇಶವ (ದೇವಸಂದ್ರ) ನಿರ್ಮಿಸಿರುವ, ನವೀನ್ ರೆಡ್ಡಿ ಬಿ ನಿರ್ದೇಶನದ ‘ಮಾದೇವ’ ಚಿತ್ರದಲ್ಲಿ ವಿನೋದ್ ಪ್ರಭಾಕರ್, ಸೋನಾಲ್ ಮೊಂತೆರೊ, ಶ್ರೀನಗರ ಕಿಟ್ಟಿ, ಮಾಲಾಶ್ರೀ, ಶ್ರುತಿ, ಅಚ್ಯುತ್ ಕುಮಾರ್, ಕಾಕ್ರೋಜ್ ಸುಧೀ, ಮೈಕೋ ನಾಗರಾಜ್, ಬಲ ರಾಜ್ವಾಡಿ, ಮುನಿರಾಜು, ಚೈತ್ರಾ ಮುಂತಾದ ಅನುಭವಿ ಕಲಾವಿದರ ತಾರಾಬಳಗ ಚಿತ್ರದಲ್ಲಿದೆ.
