ಪ್ರತಿಯೊಬ್ಬ ಅಪ್ಪ-ಅಮ್ಮನಿಗೂ ಎಸ್‍. ನಾರಾಯಣ್‍ ಸಂದೇಶ …

ಎಸ್‍. ನಾರಾಯಣ್‍ (S Narayan) ಆಗಾಗ ತಮ್ಮ ಚಿತ್ರಗಳ ಮೂಲಕ ಸಂದೇಶಗಳನ್ನು ಹೇಳುತ್ತಿರುತ್ತಾರೆ. ಈ ಬಾರಿ ಅವರು ತಮ್ಮ ‘ಮಾರುತ’ ಚಿತ್ರದಲ್ಲೂ ಒಂದು ಸಂದೇಶವನ್ನು ಹೇಳಿದ್ದು, ಮಕ್ಕಳ ಮೇಲೆ ನಿಗಾ ಇಡಿ ಎಂದು ಅವರು ಪ್ರತಿಯೊಬ್ಬ ತಂದೆ-ತಾಯಿಗೂ ಹೇಳಿದ್ದಾರೆ.

‘ದುನಿಯಾ’ ವಿಜಯ್‍ ಮತ್ತು ಕೆ. ಮಂಜು ಮಗ ಶ್ರೇಯಸ್‍ ಮಂಜು ಅಭಿನಯದಲ್ಲಿ ನಿರ್ದೇಶಿಸುತ್ತಿರುವ ‘ಮಾರುತ’ (Marutha) ಚಿತ್ರದ ಮೊದಲ ಹಾಡಿನ ಲಿರಿಕಲ್‍ ವೀಡಿಯೋ ಬಿಡುಗಡೆ ಆಗಿದೆ. ಎಸ್‍. ನಾರಾಯಣ್‍ ಅವರೇ ಹಾಡು ಬರೆದು, ಸಂಗೀತ ಸಂಯೋಜನೆ ಮಾಡಿದ್ದು, ಈ ಹಾಡಿಗೆ ಚಂದನ್‍ ಶೆಟ್ಟ ಧ್ವನಿಯಾಗಿದ್ದಾರೆ.

ಈ ಚಿತ್ರದಲ್ಲೊಂದು ಗಂಭೀರ ಸಂದೇಶ ಹೇಳಿರುವುದಾಗಿ ಹೇಳುವ ನಾರಾಯಣ್‍, ‘ಪೋಷಕರು ತಮ್ಮ ಮಕ್ಕಳ ಬಗ್ಗೆ ಎಚ್ಚರ ವಹಿಸಬೇಕು. ಅವರ ಚಲನವಲನದ ಬಗ್ಗೆ ಗೊತ್ತಿರಬೇಕು. ಅವರ ಕೈಯಲ್ಲಿರುವ ಮೊಬೈಲ್ ಚಟುವಟಿಕೆಗಳ ಬಗ್ಗೆ ನಿಮಗೆ ತಿಳಿದಿರಬೇಕು. ಎಷ್ಟೇ ಬ್ಯುಸಿಯಿದರೂ ವಾರಕ್ಕೊಮ್ಮೆಯಾದರೂ ಸಮಯ ಬಿಡುವು ಮಾಡಿಕೊಂಡು ಅವರ ಜೊತೆ ಸಮಯ ಕಳೆಯಬೇಕು. ಅವರ ಮನಸ್ಸಿನ ಆಸೆಗಳು, ಬಯಕೆಗಳನ್ನು ಹಂಚಿಕೊಳ‍್ಳಬೇಕು. ಏಕೆಂದರೆ, ಅವರು ನಿಮ್ಮ ಸ್ವತ್ತು. ಆ ಮಕ್ಕಳು ಈ ದೇಶಕ್ಕೆ ಸಂಪತ್ತು. ಈ ವಿಷಯದ ಮೇಲೆ ಚಿತ್ರದ ಕಥೆ ಹೆಣೆಯಲಾಗಿದೆ. ಈ ಚಿತ್ರದ ಮೂಲಕ ದೇಶ ಎದುರಿಸುತ್ತಿರುವ ಒಂದು ಗಂಭೀರ ಸಮಸ್ಯೆಯನ್ನು ಈ ಚಿತ್ರದ ಮೂಲಕ ತೋರಿಸಲಾಗಿದೆ’ ಎಂದರು ನಾರಾಯಣ್.

’ದುನಿಯಾ’ ವಿಜಯ್ ಚಿತ್ರತಂಡಕ್ಕೆ ಬರುವವರೆಗೂ ಈ ಚಿತ್ರಕ್ಕೆ ‘ಮಾರುತ’ ಎಂಬ ಶೀರ್ಷಿಕೆ ಇರಲಿಲ್ಲವಂತೆ. ‘ಅವರು ಬಂದ ನಂತರ ‘ಮಾರುತ’ ಎಂಬ ಶೀರ್ಷಿಕೆ ಇಡಲಾಯಿತು. ಏಕೆಂದರೆ, ಹಿಂದೆ ನಾವಿಬ್ಬರು ‘ಚಂಡ’ ಚಿತ್ರ ಮಾಡಿದ್ದೆವು. ಈಗ ‘ಮಾರುತ’ ಚಿತ್ರ ಮಾಡಿದ್ದೇವೆ. ಎರಡು ಸೇರಿ ಯಶಸ್ಸಿನ ಚಂಡ ಮಾರುತ ಆಗುವ ಭರವಸೆ ಇದೆ’ ಎಂದರು.

ಎಸ್. ನಾರಾಯಣ್ ಅವರಿಂದ ವಿಜಯ್‍ ಸಾಕಷ್ಟು ಶಿಸ್ತು ರೂಢಿಸಿಕೊಂಡಿದ್ದಾರಂತೆ. ‘ನಾನು ನಿರ್ದೇಶನ ಮಾಡಬೇಕಾದರೆ ಅವರ ಶಿಸ್ತನ್ನು ರೂಡಿಸಿಕೊಂಡಿದ್ದೇನೆ. ಸಾಕಷ್ಟು ಸೂಪರ್ ಹಿಟ್ ಕೌಟುಂಬಿಕ ಚಿತ್ರಗಳನ್ನು ನಿರ್ದೇಶಿಸಿರುವ ಖ್ಯಾತಿ ನಾರಾಯಣ್ ಅವರಿಗಿದೆ‌‌. ಅವರ ನಿರ್ದೇಶನದಲ್ಲಿ ಕೌಟುಂಬಿಕ ಸಿನಿಮಾದಲ್ಲಿ ನಟಿಸುವ ಆಸೆ ನನಗೆ ಇದೆ’ ಎಂದರು.

‘ಮಾರುತ’ ಚಿತ್ರದಲ್ಲಿ ವಿಜಯ್‍ ಮತ್ತು ಶ್ರೇಯಸ್‍ ಜೊತೆಗೆ ಬೃಂದಾ ಆಚಾರ್ಯ, ತಾರಾ, ಸಾಧು ಕೋಕಿಲ, ಪ್ರಮೋದ್‌ ಶೆಟ್ಟಿ, ರಂಗಾಯಣ ರಘು, ಶರತ್ ಲೋಹಿತಾಶ್ವ ಮುಂತಾದವರು ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ರವಿಚಂದ್ರನ್ ಸಹ ಕಾಣಿಸಿಕೊಂಡಿದ್ದಾರೆ.

ಈಶಾ ಪ್ರೊಡಕ್ಷನ್ಸ್ ಬ್ಯಾನ ಅಡಿ ‘ಮಾರುತ’ ಚಿತ್ರವನ್ನು ಕೆ. ಮಂಜು ಮತ್ತು ರಮೇಶ್‍ ಯಾದವ್‍ ಜೊತೆಯಾಗಿ ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ:-


ಹೆಚ್ಚಿನ ಓದಿಗೆ:-

One thought on “ಪ್ರತಿಯೊಬ್ಬ ಅಪ್ಪ-ಅಮ್ಮನಿಗೂ ಎಸ್‍. ನಾರಾಯಣ್‍ ಸಂದೇಶ …

Leave a Reply

Your email address will not be published. Required fields are marked *