‘ಕೌಂತೇಯ’ನಾದ Achyuth Kumar; ಹೊಸ ಕ್ರೈಂ ಸ್ಟೋರಿಗೆ ಚಾಲನೆ

‘ಕೌಂತೇಯ’ ಎಂದರೆ ಮಹಾಭಾರತದ ಕರ್ಣನ ಇನ್ನೊಂದು ಹೆಸರು. ಇದೀಗ ಇದೇ ಹೆಸರಿಟ್ಟುಕೊಂಡು, ಒಂದು ಚಿತ್ರ ಸದ್ದಿಲ್ಲದೆ ಪ್ರಾರಂಭವಾಗಿದೆ. ಹಾಗಂತ ಇದು ಪೌರಾಣಿಕ ಚಿತ್ರವಲ್ಲ, ಇದೊಂದು ಕ್ರೈಂ ಸ್ಟೋರಿಯಂತೆ. ಕಥೆಗೆ ಇದೇ ಹೆಸರು ಸೂಕ್ತ ಎಂದು ಈ ಹೆಸರು ಇಡಲಾಗಿದೆ.

‘ಕೌಂತೇಯ’ ಚಿತ್ರದ ಮುಹೂರ್ತ ಇತ್ತೀಚೆಗೆ ಸದ್ದಿಲ್ಲದೆ ಮುಗಿದಿದೆ. ಚಿತ್ರದಲ್ಲಿ ಅಚ್ಯುತ್ ಕುಮಾರ್ (Achyuth Kumar) ಹಾಗೂ ಶರಣ್ಯ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು, ಹಿರಿಯ ನಟ ಶಶಿಕುಮಾರ್‌ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‍ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಚಿತ್ರವನ್ನು ಬಿ.ಕೆ. ಚಂದ್ರಹಾಸ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಚಿತ್ರದ ಕುರಿತು ಮಾತನಾಡುವ ಚಂದ್ರಹಾಸ, ‘ಇದೊಂದು ಮರ್ಡರ್‌ ಮಿಸ್ಟ್ರಿ ಕುರಿತಾದ ಚಿತ್ರ. ಅಚ್ಯುತ್ ಕುಮಾರ್ ಹಾಗೂ ಶರಣ್ಯ ಶೆಟ್ಟಿ ಚಿತ್ರದಲ್ಲಿ ತಂದೆ-ಮಗಳಾಗಿ ಅಭಿನಯಿಸುತ್ತಿದ್ದಾರೆ. ಜೂನ್ 9ರಿಂದ ಮೊದಲ ಹಂತದ ಚಿತ್ರೀಕರಣ ಮಾಡುತ್ತಿದ್ದೇವೆ. ಬೆಂಗಳೂರು ಹಾಗೂ ಮೈಸೂರಿನಲ್ಲೇ ಬಹುತೇಕ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಹಾಡುಗಳಿಲ್ಲ. ಹಿನ್ನೆಲೆ ಸಂಗೀತ ಪ್ರಮುಖ ಪಾತ್ರ ವಹಿಸುತ್ತದೆ’ ಎಂದರು.

ಅಚ್ಯುತ್ ಕುಮಾರ್ ಮಾತನಾಡಿ, ‘ರಂಗನಾಥ ಎಂಬ ನಿವೃತ್ತಿಯ ಅಂಚಿನಲ್ಲಿರುವ ಸಬ್ ಇನ್ಸ್ ಪೆಕ್ಟರ್ ಪಾತ್ರ ನನ್ನದು. ಕರ್ತವ್ಯದ ಕೊನೇ ದಿನಗಳಲ್ಲಿ ಆತ ಎದುರಿಸುವ ರೋಚಕ ಕೇಸ್ ಒಂದರ ಕಥೆಯಿದು. ಕಡೆಯ ದಿನಗಳಲ್ಲಿ ಆತ ಈ ಕೊಲೆ ಕೇಸಿನ ಜತೆಗೆ ಏನೇನು ಸವಾಲುಗಳನ್ನು ಎದುರಿಸುತ್ತಾನೆ ಎಂಬುದನ್ನು ನಿರ್ದೇಶಕ ಚಂದ್ರಹಾಸ ಅವರು ಥ್ರಿಲ್ಲಿಂಗ್ ಆಗಿ ಹೇಳಹೊರಟಿದ್ದಾರೆ’ ಎಂದರು.

ನಾಯಕಿ ಶರಣ್ಯ ಶೆಟ್ಟಿ ಮಾತನಾಡಿ, ‘ಅಚ್ಯುತ್ ಕುಮಾರ್ ಅವರ ಮಗಳಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಇಲ್ಲಿ ನಾನೊಬ್ಬ ಕ್ರೈಮ್ ರಿಪೋರ್ಟರ್ ಅಗಿ ನಟಿಸುತ್ತಿದ್ದು, ತುಂಬಾ ಪವರ್ಫುಲ್ ಮತ್ತು ಬೋಲ್ಡ್ ಪಾತ್ರವದು. ಜತೆಗೆ ತಂದೆ ಮಗಳ ನಡುವಿನ ಬಾಂಧವ್ಯ ಸಹ ಇರುತ್ತದೆ’ ಎಂದರು.

‘ಬಿಗ್ ಬಾಸ್’ ನೀತು ಕೂಡ ಈ ಚಿತ್ರದಲ್ಲಿ ಒಬ್ಬ ಮಹಿಳಾ ಪೊಲೀಸ್ ಪಾತ್ರ ಮಾಡುತ್ತಿದ್ದಾರೆ. ಸುರೇಶ್‍ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಪಿ.ಎಲ್. ರವಿ ಛಾಯಾಗ್ರಹಣ, ಬಿ.ಜೆ.ಭರತ್ ಹಿನ್ನೆಲೆ ಸಂಗೀತವಿದೆ.

ಇದನ್ನೂ ಓದಿ:-


ಹೆಚ್ಚಿನ ಓದಿಗೆ:-

Leave a Reply

Your email address will not be published. Required fields are marked *