ಗಂಡಸರ ಪಾಲಿಗೆ ಆಕೆ ರಹಸ್ಯ, ಆಕೆಯ ಹೆಸರು ಭ್ರಮರಿ…

‘ಅವಳ ಅಂದಕ್ಕೆ ಸೋತವರು, ಮಾತಿಗೆ ಮರುಳಾದವರು, ನಡಿಗೆಗೆ ನಡುಗಿದವರಾರೂ, ಭೂಮಿ ಮೇಲೆ ಉಳಿದೇ ಇಲ್ಲ. ಗಂಡಸರ ಪಾಲಿಗೆ ಆಕೆ ರಹಸ್ಯ. ಆಕೆಯ ಹೆಸರು ಭ್ರಮರಿ …’
ಈ ಸಾಲುಗಳ ಮೂಲಕ ನಟಿ ಹೆಬಾ ಪಟೇಲ್ ಅವರನ್ನು ಪರಿಚಯಿಸಲಾಗಿದೆ. ಕನ್ನಡಿಗರು ಹೆಬಾ ಪಟೇಲ್ ಅವರನ್ನು ಮರೆತಿರುವುದಕ್ಕೆ ಸಾಕು. ಏಕೆಂದರೆ, ಸುಮಾರು 10 ವರ್ಷಗಳ ಹಿಂದೆ ಶರಣ್ ಅಭಿನಯದ ‘ಅಧ್ಯಕ್ಷ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಹೆಬಾ ಪಟೇಲ್, ಆ ನಂತರ ಕನ್ನಡದಲ್ಲಿ ನಟಿಸಿರಲಿಲ್ಲ. ಕನ್ನಡಕ್ಕಿಂತೆ ತೆಲುಗು ಚಿತ್ರರಂಗದಲ್ಲೇ ಬ್ಯುಸಿಯಾಗಿದ್ದರು. ಈಗ ಬಹಳ ದಿನಗಳ ನಂತರ ಅವರು ಗುರು ದೇಶಪಾಂಡೆ ನಿರ್ಮಾಣದ ‘ರಾಮರಸ’ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡಕ್ಕೆ ವಾಪಸ್ಸಾಗಿದ್ದಾರೆ.

‘ರಾಮರಸ’ ಚಿತ್ರದಲ್ಲಿ ಹೆಬಾ ಪಟೇಲ್, ಭ್ರಮರಿ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಇಂದು ಹೆಬಾ ಪಟೇಲ್ ಹುಟ್ಟುಹಬ್ಬ ಈ ಸಂದರ್ಭದಲ್ಲಿ ಅವರ ಪಾತ್ರವನ್ನು ಪರಿಚಯಿಸುವ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
‘ರಾಮರಸ’ ಚಿತ್ರದಲ್ಲಿ ‘ಬಿಗ್ ಬಾಸ್’ ವಿಜೇತ ಕಾರ್ತಿಕ್ ಮಹೇಶ್ ನಾಯಕನಾಗಿ ನಟಿಸುತ್ತಿದ್ದಾರೆ. ಹೆಬಾ ಪಟೇಲ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜಿಸಿನಿಮಾಸ್ ಲಾಂಛನದಲ್ಲಿ ಗುರು ದೇಶಪಾಂಡೆ ನಿರ್ಮಿಸುತ್ತಿರುವ ‘ರಾಮರಸ’ ಚಿತ್ರವನ್ನು ‘ಜಟ್ಟ’ ಗಿರಿರಾಜ್ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಬಿ.ಜೆ. ಭರತ್ ಸಂಗೀತ ಸಂಯೋಜಿಸುತ್ತಿದ್ದಾರೆ.
ಇದೊಂದು ಹಾರಾರ್ ಕಾಮಿಡಿ ಪ್ರಕಾರ ಚಿತ್ರವಾಗಿದ್ದು, ಜಿ ಅಕಾಡೆಮಿಯ 16 ಜನ ಹೊಸ ಪ್ರತಿಭೆಗಳಿಗೆ ತರಬೇತಿ ನೀಡಿ ಈ ಚಿತ್ರದಲ್ಲಿ ನಟಿಸಲು ಅವಕಾಶ ನೀಡಲಾಗಿದೆ.