ರಚಿತಾ ರಾಮ್‍ ವಿರುದ್ಧ ಕ್ರಮ ಕೈಗೊಳ್ಳಿ; ವಾಣಿಜ್ಯ ಮಂಡಳಿಗೆ ನಾಗಶೇಖರ್ ಆಗ್ರಹ

‘ಸಂಜು ವೆಡ್ಸ್ ಗೀತಾ 2’ ಚಿತ್ರದ ಪ್ರಚಾರಕ್ಕೆ ಬರದೆ ಆಟ ಆಡಿಸುತ್ತಿರುವ ನಟಿ ರಚಿತಾ ರಾಮ್‍ ವಿರುದ್ಧ ನಾಗಶೇಖರ್‍ ಸಿಡಿದಿದ್ದಿದ್ದಾರೆ. ಮಂಗಳವಾರ ತಮ್ಮ ತಂಡದ ಸದಸ್ಯರ ಜೊತೆಗೆ ವಾಣಿಜ್ಯ ಮಂಡಳಿಗೆ ಹೋಗಿ ರಚಿತಾ ರಾಮ್‍ ವಿರುದ್ಧ ದೂರು ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ, ರಚಿತಾ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ‘ನಿರ್ಮಾಪಕರು ಒಂದು ಚಿತ್ರಕ್ಕೆ ಕೋಟ್ಯಂತರ ಬಂಡವಾಳ ಹೂಡಿರುತ್ತಾರೆ. ಕಲಾವಿದರಿಗೆ ಸಂಭಾವನೆ, ಗೌರವ, ಊಟ ಎಲ್ಲವೂ ಕೊಟ್ಟಿರುತ್ತಾರೆ. ಕಲಾವಿದರು ಬರೀ ಸಿನಿಮಾದಲ್ಲಿ ನಟಿಸುವುದಷ್ಟೇ ಅಲ್ಲ, ಚಿತ್ರತಂಡದವರ ಜೊತೆಗೆ ನಿಲ್ಲಬೇಕು. ಆದರೆ, ರಚಿತಾ ಚಿತ್ರದ ಪ್ರಚಾರಕ್ಕೆ ಬರುತ್ತಿಲ್ಲ. ಬನ್ನಿ ಬನ್ನಿ ಎಂಬ ನಮ್ಮ ಮನವಿಗೆ ಸ್ಪಂದಿಸಿಲ್ಲ. ಹಾಗಾಗಿ, ಕಲಾವಿದರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು. ರಾಕ್‍ಲೈನ್‍ ವೆಂಕಟೇಶ್‍ ಮಾತನಾಡಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಇಲ್ಲಿ ಮನವೊಲಿಸುವ ಪ್ರಮೇಯವೇ ಇಲ್ಲ. ನಮ್ಮ ನಡುವೆ ಯಾವುದೇ ಗಲಾಟೆ ಆಗಿಲ್ಲ. ನಮ್ಮಿಂದ ಯಾವುದೇ ತೊಂದರೆ, ತಪ್ಪು ಆಗಿಲ್ಲ. ಹಾಗಿರುವಾಗ, ಯಾಕೆ ಪ್ರಚಾರಕ್ಕೆ ಬರುತ್ತಿಲ್ಲ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಅಂಥವರಿಗೆ ಕನ್ನಡ ಚಿತ್ರರಂಗದಲ್ಲಿ ಬೆಳೆಯುವುದಕ್ಕೆ ಅವಕಾಶ ಮಾಡಿಕೊಡಬಾರದು ಮತ್ತು ಅಂಥವರಿಗೆ ಕಠಿಣ ಶಿಕ್ಷೆ ಆಗಬೇಕು’ ಎಂದರು.

ಜನವರಿಯಲ್ಲಿ ಮೊದಲ ಬಾರಿಗೆ ಸಿನಿಮಾ ಬಿಡುಗಡೆ ಆದ ಸಂದರ್ಭದಲ್ಲಿ ಸಿಕ್ಕಿದ್ದು ಬಿಟ್ಟಿರೆ ಆ ನಂತರ ರಚಿತಾ ಜೊತೆಗೆ ಫೋನ್, ಮೆಸೇಜ್ ಯಾವುದೂ ಇಲ್ಲ ಎಂದಿರುವ ನಾಗಶೇಖರ್, ‘ಒಂದು ಸಿನಿಮಾದ ಪ್ರಮೋಷನ್‍ಗೆ ಹೋಗೋಕೆ ಆಗದಷ್ಟು ಬ್ಯುಸಿ ಇರುವ ಯಾರನ್ನೂ ನಾನು ನೋಡಿಲ್ಲ. ನಮ್ಮ ಚಿತ್ರವನ್ನು ಸದ್ಯದಲ್ಲೇ ಶಿವಣ್ಣ, ಉಪೇಂದ್ರ, ರಾಜ್ ಬಿ. ಶೆಟ್ಟಿ ಮುಂತಾದವರು ನೋಢುತ್ತಿದ್ದಾರೆ. ಅವರ್ಯಾರಿಗೂ ನಮ್ಮ ಚಿತ್ರಕ್ಕೂ ಸಂಬಂಧವೇ ಇಲ್ಲ. ಅವರಿಗೂ ಭಾಷೆಗೂ ಅಷ್ಟೇ ಸಂಬಂಧ. ನಮ್ಮ ಭಾಷೆಯ ಸಿನಿಮಾಗಳು ಗೆಲ್ಲಬೇಕು ಎಂಬ ಕಾರಣಕ್ಕೆ ಅವರು ನಮ್ಮ ಚಿತ್ರವನ್ನು ಪ್ರೋತ್ಸಾಹಿಸುತ್ತಿದ್ದಾರೆ. ಬೇರೆಯವರು ಇಷ್ಟೆಲ್ಲಾ ಮಾಡುವಾಗ ನಮ್ಮ ಚಿತ್ರದ ನಾಯಕಿ ಬರದೇ ಇರುವುದಕ್ಕೇ ಏನು ಹೇಳಬೇಕು?’ ಎಂಬುದು ನಾಗಶೇಖರ್‍ ಪ್ರಶ್ನೆ.

‘ಸಂಜು ವೆಡ್ಸ್ ಗೀತಾ 2’ ಚಿತ್ರವು ಜೂನ್‍ 06ರಂದು ಮರುಬಿಡುಗಡೆಯಾಗಿದೆ. ಚಿತ್ರದಲ್ಲಿ ಶ್ರೀನಗರ ಕಿಟ್ಟಿ, ರಚಿತಾ ರಾಮ್‍, ಸಂಪತ್‍ ರಾಜ್‍, ರಂಗಾಯಣ ರಘು, ರಾಗಿಣಿ, ತಬಲಾ ನಾಣಿ ಮುಂತಾದವರು ನಟಿಸಿದ್ದು, ಚಿತ್ರಕ್ಕೆ ಶ್ರೀಧರ್‍ ಸಂಭ್ರಮ್‍ ಸಂಗೀತ ಸಂಯೋಜಿಸಿದ್ದಾರೆ.

ಇದನ್ನೂ ಓದಿ:-


Leave a Reply

Your email address will not be published. Required fields are marked *

ಮಗಳ ಜೊತೆ ಮಿಲನಾ ನಾಗರಾಜ್‌ Megha Shetty; ಒಲವಿನ ಬಣ್ಣದ ಸೀರೆಯಲ್ಲಿ ಜೊತೆ ಜೊತೆಯಲು ಮೇಘಾ ಶೆಟ್ಟಿ Rachana Inder; ರಚನಾ ಇಂದರ್‌ ಅವರ ಬಳಿ ಇರುವ ಚಿತ್ರಗಳಿವು..