Spark Movie Controversy: ವಿವಾದಕ್ಕೆ ತೆರೆ; ರಮೇಶ್‌ ಇಂದಿರಾ ಬಳಿ ಕ್ಷಮೆ ಕೇಳಿದ ‘ಸ್ಪಾರ್ಕ್’ ಚಿತ್ರತಂಡ

ನಿರಂಜನ್‍ ಸುಧೀಂದ್ರ ಅಭಿನಯದ ‘ಸ್ಪಾರ್ಕ್’ ಚಿತ್ರದಲ್ಲಿ ‘ನೆನಪಿರಲಿ’ ಪ್ರೇಮ್‍ ನಟಿಸುತ್ತಿರುವ ವಿಷಯ ಶುಕ್ರವಾರ ಕೇಳಿ ಬಂದಿತ್ತು. ಈ ಚಿತ್ರತಂಡದಿಂದ ಬಿಡುಗಡೆಯಾದ ಒಂದು ಫೋಟೋ ಸಾಕಷ್ಟು ವಿವಾದ ಎಬ್ಬಿಸಿ, ಈಗ ಬಗೆಹರಿದಿದೆ. ಒಂದೇ ದಿನದಲ್ಲಿ ವಿವಾದ ಶುರುವಾಗಿ, ಮುಗಿದಿದ್ದು ವಿಶೇಷ.

‘ಸ್ಪಾರ್ಕ್’ ಚಿತ್ರದ ಪೋಸ್ಟರ್‍ನಲ್ಲಿ ಪ್ರೇಮ್‍, ಬೆಂಕಿ ಅಂಟಿರುವ ಭಿತ್ತಿಪತ್ರದಿಂದ ತಮ್ಮ ಸಿಗಾರ್‍ ಹಚ್ಚುತ್ತಿರುವ ದೃಶ್ಯವಿದೆ. ಈ ಭಿತ್ತಿಪತ್ರದಲ್ಲಿ ರಮೇಶ್‍ ಇಂದಿರಾ ಅವರ ಭಾವಚಿತ್ರವಿದೆ. ಮೊದಲಿಗೆ ‘ಸ್ಪಾರ್ಕ್’ ಚಿತ್ರದಲ್ಲಿ ಅವರು ನಟಿಸುತ್ತಿಲ್ಲ. ಮೇಲಾಗಿ, ಅದು ‘ಭೀಮ’ ಚಿತ್ರದ ಫೋಟೋ. ತಮ್ಮ ಭಾವಚಿತ್ರವನ್ನು ಅನುಮತಿ ಇಲ್ಲದೆ ಬಳಸಿಕೊಂಡಿರುವುದರಕ್ಕೆ ಚಿತ್ರತಂಡದ ಬಗ್ಗೆ ರಮೇಶ್ ಇಂದಿರಾ ಬೇಸರಗೊಂಡಿದ್ದರು.

ಈ ಕುರಿತು ತಮ್ಮ ಫೇಸ್‍ಬುಕ್‍ ಖಾತೆಯ ಮೇಲೆ ಅಸಮಾಧಾನ ಹೊರಹಾಕಿದ್ದ ನಟಿ – ನಿರ್ಮಾಪಕಿ ಶ್ರುತಿ ನಾಯ್ಡು, ನಟರಿಂದ ಸೂಕ್ತ ಅನುಮತಿ ಪಡೆಯದೇ ಈ ರೀತಿ ಬಳಸಿಕೊಂಡಿರುವುದು ತಪ್ಪು. ರಮೇಶ್‍ ಅವರ ಪರವಾಗಿ ಚಿತ್ರತಂಡ ಮತ್ತು ಪ್ರೇಮ್‍ ಅವರ ಮೇಲೆ ಕಾನೂನು ಕ್ರಮ ಜರಗಿಸುವುದಾಗಿ ಹೇಳಿಕೊಂಡಿದ್ದರು.

ಈಗ ಚಿತ್ರದ ನಿರ್ದೇಶಕ ಮಹಾಂತೇಶ್‍ ಹಂದ್ರಾಳ್‍, ರಮೇಶ್‍ ಇಂದಿರಾ ಅವರ ಕ್ಷಮೆ ಕೇಳಿದ್ದಾರೆ. ರಮೇಶ್‍ ಸಹ ದೊಡ್ಡ ಮನಸ್ಸು ಮಾಡಿ ಮಾಫಿ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಮಹಾಂತೇಶ್‍, ‘ರಮೇಶ್‌ ಇಂದಿರಾ ಅವರಿಂದ ಅನುಮತಿ ಪಡೆದು ಅವರ ಫೋಟೋ ಬಳಸಿಕೊಳ್ಳಬೇಕಿತ್ತು. ಒಂದು ಸಣ್ಣ ಗೊಂದಲದಿಂದ ತಪ್ಪಾಗಿದೆ. ಈ ಕುರಿತು ರಮೇಶ್‍ ಅವರ ಬಳಿ ಕ್ಷಮೆ ಕೇಳಿದ್ದೇನೆ. ‘ಮೊದಲು ನೀವು ಒಮ್ಮೆ ತಿಳಿಸಬೇಕಿತ್ತು. ಆದರೆ, ಅದು ನಡೆದು ಹೋಗಿದೆ. ಮುಂದೆ ಈ ರೀತಿ ತಪ್ಪು ಆಗದಂತೆ ನೋಡಿಕೊಳ್ಳಿ’ ಎಂದು ರಮೇಶ್‌ ಇಂದಿರಾ ಹೇಳಿದ್ದಾರೆ’ ಎಂದು ಮಹಾಂತೇಶ್‍ ಹೇಳಿಕೊಂಡಿದ್ದಾರೆ. ಅಲ್ಲಿಗೆ, ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಏರುವುದಕ್ಕೆ ಮೊದಲೇ ಸಮಾಪ್ತಿಯಾಗಿದೆ.

‘ಸ್ಪಾರ್ಕ್‌’ ಚಿತ್ರವನ್ನು ಡಾ. ಗರಿಮಾ ಅವಿನಾಶ್ ವಸಿಷ್ಠ ನಿರ್ಮಿಸುತ್ತಿದ್ದಾರೆ. ಮಹಾಂತೇಶ್‍ ಹಂದ್ರಾಳ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ನಿರಂಜನ್‌ ಸುಧೀಂದ್ರ ನಟಿಸುತ್ತಿದ್ದು, ಪ್ರೇಮ್‍ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:-


ಹೆಚ್ಚಿನ ಓದಿಗೆ:-

  1. […] Yuddakanda box office collection; ಗಳಿಕೆ ಗೊತ್ತಿಲ್ಲ, ಒಳ್ಳೆಯ ಪ್ರಯತ್ನ ಗೆದ್ದಿದೆ ಎಂದ ಅಜೇಯ್‍ ರಾವ್‍ […]

  2. […] Yuva Rajkumar Ekka; ‘ಎಕ್ಕ’ದಲ್ಲಿ ಪುನೀತ್‍ ಅವರನ್ನು ನೆನಪಿಸಿದ ಯುವ ರಾಜಕುಮಾರ್ […]

Leave a Reply

Your email address will not be published. Required fields are marked *