Mallikarjun Bande life story; ಕೊನೆಗೂ ಸಿನಿಮಾ ಆಯ್ತು ಮಲ್ಲಿಕಾರ್ಜುನ ಬಂಡೆ ಲೈಫ್‍ ಸ್ಟೋರಿ

ಕೆಲವು ವರ್ಷಗಳ ಹಿಂದೆ ಗುಲ್ಬರ್ಗದಲ್ಲಿ ರೌಡಿ ಶೀಟರ್ ಮುನ್ನಾನನ್ನು ಸೆರೆಹಿಡಿಯುವ ಸಂದರ್ಭದಲ್ಲಿ ಶೂಟೌಟ್‍ಗೆ ಬಲಿಯಾದ ಹುತಾತ್ಮ ಪೊಲೀಸ್ ಅಧಿಕಾರಿ (ಪಿ.ಎಸ್.ಐ) ಮಲ್ಲಿಕಾರ್ಜುನ ಬಂಡೆ (Mallikarjun Bande) ಅವರ ಕುರಿತು ಚಿತ್ರ ನಿರ್ಮಾಣ ಮಾಡುವುದಕ್ಕೆ ಪೈಪೋಟಿಯೇ ನಡೆದಿತ್ತು. ಸುದೀಪ್‍ ಅಥವಾ ದರ್ಶನ್‍ ಅಭಿನಯದಲ್ಲಿ ‘ಬಂಡೆ’ ಎಂಬ ಚಿತ್ರ ಮಾಡುವುದಾಗಿ ಕೆಲವರು ಘೋಷಿಸಿ ಸುದ್ದಿ ಮಾಡಿದ್ದರು. ಆದರೆ, ಬಂಡೆ ಅವರ ಕಥೆ ಚಿತ್ರವಾಗಲೇ ಇಲ್ಲ.

ಬಂಡೆ ನಿಧನರಾಗಿ 11 ವರ್ಷಗಳ ನಂತರ ಈಗ ಕೊನೆಗೂ ಅವರ ಕುರಿತು ಚಿತ್ರ ತಯಾರಾಗಿದೆ. ‘ಕೃಷ್ಣ ರುಕ್ಮಿಣಿ’ ಸೇರಿದಂತೆ ಕೆಲವು ಜನಪ್ರಿಯ ಧಾರಾವಾಹಿಗಳಲ್ಲಿ ಅಭಿನಯಿಸಿರುವ ಸಂತೋಷ್ ರಾಮ್, ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ‘ಬಂಡೆ ಸಾಹೇಬ್‍’ ಎಂದು ಹೆಸರಿಡಲಾಗಿದೆ.

ಮಲ್ಲಿಗೆ ಸಿನಿ ಕಂಬೈನ್ಸ್ ಲಾಂಛನದಲ್ಲಿ ಗೋಪಣ್ಣ ದೊಡ್ಮನಿ, ಕಮಲ ದೊಡ್ಮನಿ ಹಾಗೂ ಮಾಲ ವಿ. ಕೊರಳ್ಳಿ ನಿರ್ಮಿಸಿರುವ ಈ ಚಿತ್ರವನ್ನು ಚಿನ್ಮಯ್ ರಾಮ್ ನಿರ್ದೇಶಿಸಿದ್ದಾರೆ. ‘ಕುರುಕ್ಷೇತ್ರ’, ‘ದಿ ವಿಲನ್’ ಸೇರಿದಂತೆ ಕೆಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ ಚಿನ್ಮಯ್ ರಾಮ್ಗೆ ‘ಬಂಡೆ ಸಾಹೇಬ್’ ಮೊದಲ ನಿರ್ದೇಶನದ ಚಿತ್ರ.

‘ಬಂಡೆ ಸಾಹೇಬ್’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಗುಲ್ಬರ್ಗ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ಎಂ.ಎಸ್ ತ್ಯಾಗರಾಜ್ ಸಂಗೀತ, ‘ಮುಂಜಾನೆ’ ಮಂಜು ಛಾಯಾಗ್ರಹಣವಿರುವ ಈ ಚಿತ್ರಕ್ಕೆ. ವೀರಣ್ಣ ಕೊರಳ್ಳಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

ಸಂತೋಷ್ ರಾಮ್‍ಗೆ ನಾಯಕನಾಗಿ ಇದು ಎರಡನೇ ಚಿತ್ರ. ಕಾವ್ಯ ಭಾರದ್ವಾಜ್ ಈ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ. ವೀರಣ್ಣ ಕೊರಳ್ಳಿ, ಬಿರಾದಾರ್,‌ ಸಿಂಬಾ ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *